Education F5 India News General News Karnataka News Social News

ಸಾರ್ವಜನಿಕರು/ಕಕ್ಷಿದಾರರ ಹೆಚ್ಚಿನ ಅನುಕೂಲಕ್ಕಾಗಿ ಲೋಕ್ ಆದಾಲತ್‌ನ ಪ್ರಯೋಜನವನ್ನು ಜನಪ್ರಿಯಗೊಳಿಸಲು ಮಾಧ್ಯಮಗಳ ಸಹಕಾರ ಅತ್ಯಗತ್ಯ -ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್

ಬೆಂಗಳೂರು, ಸೆಪ್ಟೆಂಬರ್ 20 (ಕರ್ನಾಟಕ ವಾರ್ತೆ):

ಸಾರ್ವಜನಿಕರು/ಕಕ್ಷಿದಾರರ ಹೆಚ್ಚಿನ ಅನುಕೂಲಕ್ಕಾಗಿ ಲೋಕ್ ಆದಾಲತ್‌ನ ಪ್ರಯೋಜನವನ್ನು ಜನಪ್ರಿಯಗೊಳಿಸುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಲೋಕ್ ಆದಾಲತ್‌ಗಳ ಪ್ರಯೋಜನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ, ಇನ್ನೂ ಅನೇಕ ಕಕ್ಷಿದಾರರಿಗೆ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ. ಇದಕ್ಕೆ ಮಾಧ್ಯಮಗಳ ಸಹಕಾರ ಅತ್ಯಗತ್ಯವಾಗಿರುವುದು ಎಂದು
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ತಿಳಿಸಿದರು.

ಬೆಂಗಳೂರಿನ ಕರ್ನಾಟಕ ಉಚ್ಛ ನ್ಯಾಯಾಲಯದ ಮೊದಲನೆಯ ಮಹಡಿಯ ಕಾರ್ಯನಿರ್ವಾಹಕ ಅಧ್ಯಕ್ಷರ ಸಭೆಯ ಸಭಾಂಗಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ದಿನಾಂಕ 14-09-2024ರಂದು ಹಮ್ಮಿಕೊಂಡ ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಮಾತನಾಡಿದ ನ್ಯಾಯಮೂರ್ತಿಗಳು, ಸಾರ್ವಜನಿಕರು ಮತ್ತು ಕಕ್ಷಿದಾರರು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಆದಾಲತ್‌ ನಲ್ಲಿ ಇತ್ಯರ್ಥಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕಾಗಿ ತಿಳಿಸಿದರು.

ದಿನಾಂಕ :14.09.2024 ರ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 35,84,430 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ದಂಪತಿಗಳ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ. ಜೀವನ ಪುನರ್ ಸ್ಥಾಪನೆಗೆ ಉತ್ತೇಜಿಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಉತ್ತೇಜಿಸಲಾಗಿತ್ತು. ಒಟ್ಟು 1,669 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸದರಿ 1,669 ಪ್ರಕರಣಗಳಲ್ಲಿ ಸುಮಾರು 248 ದಂಪತಿಗಳು ರಾಜಿ ಸಂಧಾನದಿಂದ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡಿರುತ್ತಾರೆ.

Partition Suits (ವಿಭಾಗ ದಾವೆ) ಗೆ ಸಂಬಂಧಿಸಿದಂತೆ ಒಟ್ಟು 2,696 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳ ಒಟ್ಟು 3,621 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ.191 ಕೋಟಿಗಳಷ್ಟು ಪರಿಹಾರ ಮೊತ್ತವನ್ನು ನೀಡಲಾಗಿರುತ್ತದೆ. N.I. Act (ಚೆಕ್ ಬೌನ್ಸ್) ಪ್ರಕರಣಗಳು ಒಟ್ಟು 8,517 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಎಲ್.ಎ.ಸಿ. ಆಮಲ್ವಾರಿ ಪ್ರಕರಣಗಳು ಸಂಬಂಧಿಸಿದಂತೆ ಒಟ್ಟು 389 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 196 ಕೋಟಿಗಳನ್ನು ಪರಿಹಾರ ಮೊತ್ತವಾಗಿ ನೀಡಲಾಗಿರುತ್ತದೆ. ಎಂ.ವಿ.ಸಿ. ಆಮಲ್ವಾರಿ ಪ್ರಕರಣಗಳು ಒಟ್ಟು 623 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರೂ. 48 ಕೋಟಿಗಳನ್ನು ಪರಿಹಾರ ಮೊತ್ತವಾಗಿ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಇತರೆ ಅಮಲ್ದಾರಿ ಪ್ರಕರಣಗಳ ಒಟ್ಟು 2,598 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರೂ. 108 ಕೋಟಿಗಳನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿರುತ್ತದೆ. ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳ ಒಟ್ಟು 73 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರೂ. 3 ಕೋಟಿ 24 ಲಕ್ಷಗಳನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿರುತ್ತದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರ ರವರಿಗೆ ದಿನಾಂಕ 09.08.2024 ರಂದು ಪತ್ರವನ್ನು ಬರೆದು, ಪತ್ರದಲ್ಲಿ ಕರ್ನಾಟಕ ಪುರಸಭೆ ಕಾಯಿದೆಯ ಕಲಂ 103 ಮತ್ತು 105 ರನ್ವಯ ಆಸ್ತಿ ತೆರಿಗೆ ಪಾವತಿಗೆ ರಿಯಾಯತಿ ಸೌಲಭ್ಯವನ್ನು ಲೋಕ್ ಆದಾಲತ್‌ಗೆ ವಿಸ್ತರಿಸುವಂತೆ ಕೋರಲಾಗಿದ್ದು, ಸದರಿ ಮನವಿಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ, ಕರ್ನಾಟಕ ಪುರಸಭೆ ಕಾಯಿದೆಯ ಕಲಂ 105 ರಡಿಯಲ್ಲಿ ರಿಯಾಯತಿ ಸೌಲಭ್ಯವನ್ನು ವಿಸ್ತರಿಸಿರುತ್ತದೆ. ಇದರ ಪರಿಣಾಮವಾಗಿ ಸದರಿ ಸೌಲಭ್ಯದ ಪ್ರಯೋಜನವನ್ನು ಒಟ್ಟು 5,95,892 (ಪ್ರಕರಣಗಳು) ರಷ್ಟು ತೆರಿಗೆ ಪಾವತಿದಾರರು ಪಡೆದುಕೊಂಡಿದ್ದು, ಒಟ್ಟು ರೂ. 653 ಕೋಟಿ ಹಣ ಸರ್ಕಾರದ ಖಜಾನೆಗೆ ಜಮೆಯಾಗಿರುತ್ತದೆ.

ಈ ಬಾರಿಯ ರಾಷ್ಟ್ರೀಯ ಲೋಕ್ ಆದಾಲತ್‌ನ ವಿಶೇಷ ಪ್ರಕರಣಗಳ ವಿಲೇವಾರಿ :

ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯ (ಎಸ್.ಸಿ.ಸಿ.ಹೆಚ್.22) ದಲ್ಲಿನ ಚೆಕ್ ಬೌನ್ಸ್ ಪ್ರಕರಣ ಸಿ.ಸಿ. ಸಂಖ್ಯೆ 8511/2021, “ರಿಲಾಯನ್ಸ್ ಹೋಮ್ ಫೈನಾನ್ಸ್ ವಿರುದ್ಧ ಸೈಕಾನ್ ಕಂಪ್ಯೂಕ್ಷನ್ಸ್ ಪ್ರೈವೇಟ್ ಲಿಮಿಟೆಡ್” ಪ್ರಕರಣವನ್ನು ರೂ. 20 ಕೋಟಿಗಳಿಗೆ ಇತ್ಯರ್ಥಪಡಿಸಲಾಯಿತು,

ಬೆಂಗಳೂರಿನ ಲಘು ವ್ಯಾಜ್ಯಗಳ ನ್ಯಾಯಾಲಯ (ಎಸ್.ಸಿ.ಸಿ.ಹೆಚ್.01)ದಲ್ಲಿನ ಎಂ.ವಿ.ಸಿ. ಪ್ರಕರಣ ಸಂಖ್ಯೆ 01/2024, “ಅಪರ್ಣ ರಾಮಕೃಷ್ಣ ವಿರುದ್ಧ ರಾಯಲ್ ಸುಂದರಂ ವಿಮಾ ಕಂಪನಿ”ಯ ಪ್ರಕರಣವನ್ನು ರೂ. 3 ಕೋಟಿ 75 ಲಕ್ಷಗಳಿಗೆ ಇತ್ಯರ್ಥಪಡಿಸಲಾಯಿತು.

ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ-31) ನ್ಯಾಯಾಲಯದಲ್ಲಿ ಐ.ಪಿ.ಸಿ. ಕಲಂ 379 ರಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ದಾಖಲಾಗಿದ್ದ 26 ವರ್ಷಗಳ ಹಳೆಯ ಪ್ರಕರಣ ಸಿ.ಸಿ. ಸಂಖ್ಯೆ 427/1998, “ನಂಜಪ್ಪ ವಿರುದ್ಧ ಆಕ್ರಂ” ರವರ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು.

ಈ ಬಾರಿಯ ರಾಷ್ಟ್ರೀಯ ಲೋಕ್ ಆದಾಲತ್‌ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 1,022 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 277 ಪ್ರಕರಣಗಳು ಹಾಗೂ 15 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 144 ಪ್ರಕರಣಗಳು ಒಟ್ಟು 1,443 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.

ಈ ರಾಷ್ಟ್ರೀಯ ಲೋಕ್ ಆದಾಲತ್‌ನ ಇನ್ನೊಂದು ವಿಶೇಷವೆಂದರೆ 1,365 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಲೋಕ್ ಅದಾಲತ್‌ನ ಪ್ರಯೋಜನ ಪಡೆದಿರುತ್ತಾರೆ.

ಗೌರವಾನ್ವಿತ ನ್ಯಾಯಮೂರ್ತಿ ಎನ್. ವಿ. ಅಂಜರಿಯಾ, ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಪ್ರಧಾನ ಪೋಷಕರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರು ಕಾನೂನು ಸೇವೆಗಳ ಪ್ರಾಧಿಕಾರದ ಎಲ್ಲಾ ಚಟುವಟಿಕೆಗಳಲ್ಲಿ ಮತ್ತು ಲೋಕ್ ಆದಾಲತ್‌ನಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರು ಆದ ಗೌರವಾನ್ವಿತ ನ್ಯಾಯಮೂರ್ತಿ ಎನ್.ವಿ. ಅಂಜರಿಯಾರವರು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾ‌ರ್‌ ಅವರು. ರಾಷ್ಟ್ರೀಯ ಲೋಕ್ ಆದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಈ ಸಂಬಂಧ ರಾಷ್ಟ್ರೀಯ ಲೋಕ್ ಆದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಪೂರ್ಣ ಸಹಕಾರ ನೀಡಿರುವ ನ್ಯಾಯಾಂಗ ಅಧಿಕಾರಿಗಳು, ವಕೀಲರು. ಕಕ್ಷಿದಾರರು, ವಿಮಾ ಕಂಪನಿಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳಿಗೆ, ಕಕ್ಷಿದಾರರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಸಲ್ಲಿಸಿದರು

ಅದರಂತೆ ಮುಂಬರುವ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ 2024 ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ರಾಷ್ಟ್ರೀಯ ಲೋಕ್ ಆದಾಲತನ್ನು ದಿನಾಂಕ: 14.12.2024 ರಂದು ನಿಗಧಿಪಡಿಸಲಾಗಿದೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ರಾಜ್ಯದಾದ್ಯಂತ ನಾಲ್ಕನೇ ರಾಷ್ಟ್ರೀಯ ಲೋಕ್ ಅದಾಲತನ್ನು ದಿನಾಂಕ: 14.12.2024 ರಂದು ನಡೆಸಲು ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿರುತ್ತದೆ.

ಆದ್ದರಿಂದ, ಈ ಕುರಿತು ಸಾರ್ವಜನಿಕರಿಗೆ ವಿಸ್ತ್ರತ ಪ್ರಚಾರವನ್ನು ನೀಡುವಂತೆ ಮತ್ತೊಮ್ಮೆ ಮುದ್ರಣ ಮತ್ತು ವಿದ್ಯನ್ಮಾನ ಮಾಧ್ಯಮ ಮಿತ್ರರಿಗೆ ತಿಳಿಸಿದರು

johnprem

About Author

You may also like

Social News

Tirupati Temple has also taken precautions on Coronavirus.

Hyderabad: Indians fear the death of coronavirus virus in China Corona has created anxiety in the state, not only for
General News

Coronavirus fears: Bangalore roads and theaters are empty

Bangalore: The number of people infected with coronavirus has risen to 4 in Bangalore. Against this backdrop, the roads in